Hot Posts

10/recent/ticker-posts

ಭ್ರಷ್ಟರ ಬೆಂಬಲಕ್ಕೆ ಬಿಜೆಪಿ. ಲೋಕಾಯುಕ್ತರಿಗೂ ಕ್ಯಾರೆ ಅನ್ನಲ್ಲ…!!

ಭ್ರಷ್ಟರ ಬೆಂಬಲಕ್ಕೆ ಬಿಜೆಪಿ. ಲೋಕಾಯುಕ್ತರಿಗೂ ಕ್ಯಾರೆ ಅನ್ನಲ್ಲ…!!




ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ವಿಷಯದಲ್ಲಿ ಸರ್ಕಾರ ರಾಜ್ಯದ ಜನತೆಯನ್ನು ಮುಟ್ಠಾಳರನ್ನಾಗಿ ಮಾಡುವ ಪ್ರಯತ್ನ ನಡೆದಂತಿದೆ. ಭ್ರಷ್ಟರನ್ನು ಸದೆ ಬಡೆಯಲು ಸರ್ಕಾರದ ಕೆಲವು ನಿಯಮಗಳು ಲೋಕಾಯುಕ್ತರಿಗೆ ಅಡಚಣೆಯನ್ನು ಉಂಟುಮಾಡುತ್ತಿವೆ. ಹೀಗಾಗಿ ಹೆಚ್ಚಿನ ಅಧಿಕಾರ ನೀಡಿ ಎಂದು ಲೋಕಾಯುಕ್ತರು ಸರ್ಕಾರಕ್ಕೆ ಮನವಿಯನ್ನು ಮಾಡಿದ್ದರು. ಆದರೆ ಮುಖ್ಯಮಂತ್ರಿಗಳು ಮಾತ್ರ ಇದನ್ನು ತಲೆಗೇ ಹಾಕಿಕೊಳ್ಳಲಿಲ್ಲ. ಆದ್ರೆ ಸರ್ಕಾರದ ಧೊರಣೆಯನ್ನು ಸಹಿಸದೇ ಲೋಕಾಯುಕ್ತ ನ್ಯಾ.ಮೂ.ಸಂತೋಷ್ ಹೆಗಡೆ ಕಳೆದ ತಿಂಗಳು ರಾಜಿನಾಮೆಯನ್ನು ನೀಡಿದ್ದರು. ಆದರೆ ನಂತರ ಅವರ ರಾಜಿನಾಮೆಯನ್ನು ಹಿಂಪಡೆಯುವಂತೆ ಸರ್ಕಾರ ಮನವೊಲಿಸಿತು. ಆಶ್ಚರ್ಯ ಎಂದರೆ ಲೋಕಾಯುಕ್ತರ ಎಲ್ಲಾ ಬೇಡಿಕೆಯನ್ನು ಈಡೇರಿಸುವುದರ ಬದಲು ’ಮಜ್ಜಿಗೆ’ಯವರನ್ನು ಉಪಲೋಕಾಯುಕ್ತರನ್ನಾಗಿ ನೇಮಿಸಿತು ಮತ್ತು ಐ.ಎ.ಎಸ್.ಗ್ರೇಡ್ ವರೆಗಿನ ಅಧಿಕಾರಿಗಳ ವಿರುದ್ಧ ಮಾತ್ರ ಸ್ವಯಂ ಕೇಸು ದಾಖಲಿಸಿ ತನಿಖೆ ನಡೆಸಬಹುದು. ಆದರೆ ಜನ ಪ್ರತಿನಿಧಿಗಳನ್ನು ಅಂದರೆ ಎಂ.ಎಲ್.ಎ ಮತ್ತು ಮಂತ್ರಿಗಳನ್ನು ಮಾತ್ರ ಮುಟ್ಟುವಂತಿಲ್ಲ ಎಂದು ಲಕ್ಷ್ಮಣ ರೇಖೆಯನ್ನು ನಿಗಧಿಪಡಿಸಿತು.ಇದು ಕೇವಲ ಜನರ ಮೂಗಿಗೆ ತುಪ್ಪ ಸವರುವ ಪ್ರಯತ್ನ ಎಂದಷ್ಟೇ ಹೇಳಬಹುದು. ಎಂ.ಎಲ್.ಎ ಗಳನ್ನು ಏಕೆ ತನಿಖೆಗೆ ಒಳಪಡಿಸುವಂತಿಲ್ಲ ಎಂಬುದಕ್ಕೆ ಮುಖ್ಯ ಮಂತ್ರಿಗಳು ಕೊಟ್ಟ ಉತ್ತರ “ಅಧಿಕಾರ ದುರುಪಯೋಗವಾಗಬಹುದು” ಎಂದು.


ಆದರೆ ಈಗ ರೆಡ್ಡಿ ಬ್ರದರ್ಸ್ ಗಳು ಅಧಿಕಾರ ದುರುಪಯೋಗ ಪಡಿಸಿಕೊಳುತ್ತಿರುವುದರ ಮುಂದೆ ಲೋಕಾಯುಕ್ತರ ಅಧಿಕಾರ ಏನೂ ಅಲ್ಲ ಅನ್ನಿಸುತ್ತದೆ. ಹಿಂದೊಮ್ಮೆ ಶಾಸಕರ ಭವನದಲ್ಲಿಯೇ ಲಂಚ ಸ್ವೀಕರಿಸುತ್ತಿದ್ದ ಬಿ.ಜೆ.ಪಿ.ಯ ಶಾಸಕ ಸಂಪಂಗಿಯನ್ನು ಸಾಕ್ಷಿ ಸಮೇತ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರು ಹಿಡಿದಾಗ “ ವಿಧಾನಸಭೆಯ ವ್ಯಾಪ್ತಿಯಲ್ಲಿ ಏನೇ ನಡೆದರೂ ಅದು ಲೋಕಾಯುಕ್ತರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ” ಎಂದು ಹೇಳುವುದರ ಮೂಲಕ ಅಂದಿನ ಸ್ಪೀಕರ್ ಜಗದೀಶ್ ಶೆಟ್ಟರ್ ಲೋಕಾಯುಕ್ತರ ಬಾಯಿ ಮುಚ್ಚಿಸಿದರು. ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಮೊದಲು ಮಾಹಿತಿ ಬಂದಾಗ ಉತ್ಸಾಹಿತ ಮುಖ್ಯ ಮಂತ್ರಿ ಬಿ.ಎಸ್.ವೈ. ಬಳ್ಳಾರಿಯ ಪ್ರಮುಖ ಅಧಿಕಾರಿಗಳನ್ನು ವರ್ಗಾವಣೆ ಮಾಡಿದಾಗ ದೊಡ್ಡ ರಾದ್ಧಂತವೇ ಆಯಿತು. ಕೊನೆಗೆ ರೆಡ್ಡಿಗಳು ಮುಖ್ಯಮಂತ್ರಿಗಳ ಬುಡಕ್ಕೆ ಬೆಂಕಿ ಇಟ್ಟರು. ಕೊನೆಗೆ ಆ ಅಧಿಕಾರಿಗಳ ವರ್ಗಾವಣೆಯ ಆದೇಶವನ್ನು ಹಿಂಪಡೆದಿದ್ದಲ್ಲದೇ ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿ ಬಳಿಗಾರ್ ರನ್ನು ಬೆತ್ತಂಗಡಿ ಮಾಡಲಾಯಿತು. ಮುಖ್ಯ ಮಂತ್ರಿಯ ಆಪ್ತರೂ ಹಾಗೂ ಸಚಿವೆಯಾಗಿದ್ದ ಶೊಭಾ ಕರಂದ್ಲಾಜೆಯವರನ್ನು ಸಂಪುಟದಿಂದ ಕೈ ಬಿಡಲಾಯಿತು. ಈ ಪ್ರಕರಣದ ನಂತರ ಮುಖ್ಯಮಂತ್ರಿಗಳು ಮಾನಸಿಕವಾಗಿ ಜರ್ಝರಿತವಾದರು. ಜನರಿಗೆ ಉಪಕಾರ ಮಾಡಬೇಕು ಅಂದುಕೊಂಡು ಬಂದಿದ್ದ ಯಡೆಯೂರಪ್ಪನವರು ಅನಿವಾರ್ಯವಾಗಿ ರೆಡ್ಡಿಗಳ ಕೈ ಗೊಂಬೆಯಾದರು. ಇದೊಂದು ಉದಾಹರಣೆ ಸಾಕೆನಿಸುತ್ತದೆ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಯಾಕೆ ನೀಡುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನ್ಯಾಯಯುತವಾಗಿ ಗಣಿ ಕೆಲಸ ನಿರ್ವಹಿಸುತ್ತಿದ್ದರೆ ಕೇವಲ ಅಧಿಕಾರಿಗಳ ವರ್ಗಾವಣೆಯ ವಿಷಯವನ್ನು ಇಷ್ಟೊಂದು ದೊಡ್ಡದು ಮಾಡುತ್ತಿರಲಿಲ್ಲ ರೆಡ್ಡೀ ಬ್ರದರ್ಸ್ ಸಾಚಾ ಎನ್ನುವುದಾದರೆ ಯಾವ ಅಧಿಕಾರಿಗಳು ಇದ್ದರೆ ಇವರಿಗೇನು?. ಸ್ವತಃ ಲೋಕಾಯುಕ್ತರೇ ನನ್ನಿಂದ ಅಕ್ರಮವನ್ನು ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಹೀಗಾಗಿ ನಾನು ರಾಜಿನಾಮೆಯನ್ನು ನೀಡುತ್ತಿದ್ದೇನೆ ಎಂದು ಅಸಹಾಯಕರಂತೆ ಮಾತಾಡಿದ್ದು ಕಂಡರೆ ರಾಜ್ಯದಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಬೇರೂರಿದೆ ಎಂಬುದು ಅರ್ಥವಾಗುತ್ತದೆ

Отправить комментарий

0 Комментарии