ಪಾರಂಪರಿಕ ಪಟ್ಟದಕಲ್ಲು, ಬಾದಾಮಿ ಚಾಲುಕ್ಯರ ಕಾಲಕ್ಕೂ ಮೊದಲೇ ಪ್ರಗತಿ ಹೊಂದಿದ ನಗರವಾಗಿತ್ತೆಂದು ಶಾಸನಗಳಿಂದ ತಿಳಿದು ಬರುತ್ತದೆ. ವಿಶ್ವವಿಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿಯು (ಕ್ರಿ.ಶ. ೧೫೦) ಈ ಊರನ್ನು “ಪೆಟ್ರಗಲ್” ಎಂದು ದಾಖಲಿಸಿರುವನು.
ಕವಿರಾಜಮಾರ್ಗ ಕೃತಿಯಲ್ಲಿ ಹೆಸರಿಸಿರುವ ತಿರುಳ್ಗನ್ನಡ ಪಟ್ಟಣಗಳ ಹೆಸರುಗಳಲ್ಲಿ “ಪಟ್ಟದಕಲ್ಲು” ಕೂಡ ಒಂದಾಗಿದೆ. ಕ್ರಿ.ಶ. ೧೧೬೨ರ ಶಾಸನದಲ್ಲಿ ಇದನ್ನು ಕಿಸುವೊಳಲ್ ಅಂದರೆ ಕೆಂಪು ಪಟ್ಟಣ ಅಥವಾಸ ರಕ್ತಪುರ ಎಂದು ಉಲ್ಲೇಖಿಸಲಾಗಿದೆ.
ಸಂಗಮೇಶ್ವರ ದೇವಾಲಯ, ತ್ರೈಲೋಕೇಶ್ವರ ದೇವಾಲಯ, ಮೊದಲಾದ ಭವ್ಯ ಮಂದಿರಗಳು ಹಾಗೂ ಅದ್ಭುತ ವಾಸ್ತುಶಿಲ್ಪಳಿಗೆ ಪಟ್ಟದ ಕಲ್ಲು ಸಾಕ್ಷಿಯಾಗಿದೆ ಹೀಗಾಗಿ ಇದನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ . ಚಾಳುಕ್ಯರ ಕಾಲದಲ್ಲಿ ಇಲ್ಲಿ ಭವ್ಯ ಶಿಲಾವೈಭವದ ದೇವಾಲಯಗಳು ನಿರ್ಮಾಣವಾದ ಹಿನ್ನೆಲೆಯಲ್ಲಿ ಇಂದು ಇದೊಂದು ಪಾರಂಪರಿಕ ಹಾಗೂ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಹೀಗಾಗಿ ಇಲ್ಲಿ ಪ್ರತೀ ವರ್ಷವೂ ಪಟ್ಟದ ಕಲ್ಲು ಉತ್ಸವದ ಮೂಲಕ ಹಳೆಯ ವೈಭವಕ್ಕೆ ಮೆರುಗು ನೀಡುವ ಪ್ರಯತ್ನ ಮಾಡಲಾಗುತ್ತದೆ
0 Комментарии