ನನಗಿನ್ನೂ ನನೆಪಿದೆ.. ಅದು ಸುಮರು ೨೩ ವರ್ಷಗಳಿಗಿಂತಲೂ
ಹಿಂದಿನ ಮಾತು.. ನಾನಾಗ ಮೂರು, ನಾಲ್ಕು ವರ್ಷದ ಹುಡುಗನಾಗಿದ್ದೆ.. ಬಡತನ ಅನ್ನೋದು, ನಮ್ಮ ಮನೆಯ
ಬಂಧುವಾಗಿತ್ತು.. ವ್ಯವಸಾಯವೇ ಮೂಲಾಧಾರವಾಗಿದ್ದ ಫ್ಯಾಮಿಲಿ.. ಹೊಲದ ಮೂಲೆಯಲ್ಲಿ ಬೆಳೆದ ತರಕಾರಿಯೇ
ತುತ್ತಿನ ಚೀಲ ತುಂಬಿಸುತ್ತಿತ್ತು.. ಅಂತಹ ಪರಿಸ್ಥಿತಿಯಲ್ಲಿ ಬಣ್ಣದ ಹಬ್ಬ ಹೋಳಿಯನ್ನು ಆಚರಿಸಲು
ಊರೆಲ್ಲಾ ಸಜ್ಜಾಗಿ ನಿಂತಿತ್ತು.. ನನ್ನ ವಯಸ್ಸಿನ ಮಕ್ಕಳು ಬಣ್ಣವನ್ನು ಖರೀದಿಸಿ, ಒಬ್ಬರ
ಮುಖಕ್ಕೆ ಒಬ್ಬರು ಹಚ್ಚುತ್ತಿದ್ದರು.. ಆದ್ರೆ ನನ್ನಲ್ಲಿ ಬಣ್ಣ ಹಚ್ಚಲು ಏನೂ ಇರಲಿಲ್ಲ..
ಅಪ್ಪನನ್ನು ಕೇಳಿದೆ.. ಬಣ್ಣ ತರಲು ದುಡ್ಡು ಕೊಡು ಅಂತ.. ಆಗ ಅಪ್ಪ, ಜೇಬಿಗೆ ಕೈ ಹಾಕಿ, ತಡಕಾಡಿ,
ಕೊನೆಗೆ ಒಂದು ಪೈಸೆಯನ್ನು ತೆಗೆದು ಕೊಟ್ರು.. ಅದರಲ್ಲಿ ಒಂಚು ಚಿಕ್ಕ ಬಣ್ಣದ ಪ್ಯಾಕೆಟ್ ತಗೊಂಡು
ಸ್ನೇಹಿತರಿಗೆ ಹಚ್ಚಿದೆ.. ಆದ್ರೆ ಒಬ್ಬನ ಮುಖಕ್ಕೆ ಹಚ್ಚುವಷ್ಟರಲ್ಲಿ ಆ ಬಣ್ಣ ಖಾಲಿಯಾಗಿತ್ತು..
ಏನು ಮಾಡಲಿ..? ಓಕುಳಿಯಾಡುವ ತುಡಿತ ನನ್ನಲ್ಲಿದೆ.. ಆದ್ರೆ ಹಣವೇ ಇಲ್ಲ..!
ಆ ಸಮಯದಲ್ಲಿ ಪಕ್ಕದ ಮನೆಯವರು ಓಡಿ ಬಂದು ಬಂಡಿ ಎಣ್ಣಿ”
ಅಂದ್ರೆ “ಎತ್ತಿನ ಗಾಡಿಯ ಚಕ್ರಕ್ಕೆ ಹಾಕುವ ಕಪ್ಪು ಎಣ್ಣೆ” ಯನ್ನು ತಗೊಂಡು ಬಂದು,
ಸ್ನೇಹಿತನೊಬ್ಬನಿಗೆ ಹಚ್ಚಿ ಸಂಭ್ರಮಿಸಿದ್ರು.. ಆಗ ನಾನು ಓಡಿ ಹೋಗಿ ಮನೆಯಲ್ಲಿದ್ದ ’ಬಂಡಿ
ಎಣ್ಣೆ’ ಅಂದ್ರೆ ಎತ್ತಿನ ಗಾಡಿಗೆ ಹಾಕುತ್ತಿದ್ದ ಕಪ್ಪು ಎಣ್ಣೆಯನ್ನು ತಗೊಂಡು ಬಂದೆ.. ಉಳಿದ
ಎಲ್ಲಾ ಸ್ನೇಹಿತರಿಗೂ ಆ ಕಪ್ಪು ಎಣ್ಣೆಯನ್ನು ಹಚ್ಚಿ ಖುಷಿ ಪಟ್ಟಿದ್ದೆ.. ನಂತರದ ದಿನಗಳಲ್ಲಿ,
ಯಾವಾಗ ಹೋಳಿ ಹಬ್ಬ ಬಂದ್ರೂ ಕೂಡ, ಆ ಕಪ್ಪು ಎಣ್ಣೆಯೇ ನಮ್ಮ ಹಬ್ಬವನ್ನು ಪರಿಪೂರ್ಣಗೊಳಿಸುತ್ತಿತ್ತು..
ಖುಷಿ ನೀಡ್ತಾ ಇತ್ತು..
ಆದ್ರೆ ಇಂದು ಎಲ್ಲವೂ ಬದಲಾಗಿದೆ.. ಜೇಬಿನಲ್ಲಿ
ಹಣವಿದೆ.. ಬಣ್ಣದ ಪ್ಯಾಕೆಟ್ ಮಾತ್ರವಲ್ಲಾ, ಬಣ್ಣದ ಚೀಲವನ್ನೇ ಖರೀದಿಸಬಹುದು.. ಆದ್ರೆ ಅಂದು
ಹಣವಿಲ್ಲದೇ ಇದ್ದಾಗ, ಕಪ್ಪು ಬಣ್ಣದ “ಬಂಡಿ ಎಣ್ಣೆ” ನೀಡಿದ ಖುಷಿ, ಈಗಿನ ರಂಗು ರಂಗಿನ ಬಣ್ಣ
ನೀಡುತ್ತಿಲ್ಲ..! ಹಣ ಬರುವ ಬದಲಿಗೆ ನಾ ಕಳೆದ ಆ ಬಾಲ್ಯ
ಮತ್ತೆ ಬರಬಾರದೇ..?
0 Комментарии