Hot Posts

10/recent/ticker-posts

ಬಿಜೆಪಿಯೇ ‘ಜೀವ’ ಅಂತಿದ್ದವನ ಕುಟುಂಬಕ್ಕೆ ಈಗ ಯಾರು ದಿಕ್ಕು?




@Jeeva Jeeva.. ಈತನ ಬಗ್ಗೆ ಒಂದಷ್ಟು ವಿಚಾರಗಳನ್ನ ಹೇಳಲೇಬೇಕು. ಬದುಕಿನುದ್ದಕ್ಕೂ ವಿಧಿಯ ಜೊತೆಗೆ ಸೆಣೆಸಾಡುತ್ತಲೇ ಬದುಕಿದ ಹುಡುಗ.. ತಂದೆ ಚಿಕ್ಕ ವಯಸ್ಸಿನಲ್ಲೇ ವಿಧಿವಶ. ಅಪ್ಪ ಗಳಿಸಿದ ಆಸ್ತಿ ಇಲ್ಲ. ಹಣ ಅಂತಸ್ತು ಇಲ್ವೇ ಇಲ್ಲ. ತುತ್ತು ಅನ್ನಕ್ಕೂ ಪರದಾಡುವಂಥಾ ಪರಿಸ್ತಿತಿ ಇದ್ರೂ ತನ್ನ ಹಣೆಬರಹವನ್ನ ತಾನೇ ಬರೆದುಕೊಳ್ಳಲು ಆರಂಭಿಸಿದ್ದ. ಡಿಗ್ರಿ ಮುಗಿಸಿದ. ಆಗಾಗ ಫೋನ್ ಮಾಡಿ, ನಾನು ಸಿನಿಮಾ ರಂಣಗದಲ್ಲಿ ಮಿಂಚಬೇಕು ಅಂದಿದ್ದೀನಿ ಅಂತ ಹೇಳ್ತಾ ಇದ್ದ.ಅದೆಂಥಾ ಹಠವೋ ಇವನಿಗೆ. ಯಾರ್ ಯಾರ ಕೈಕಾಲು ಹಿಡಿದನೋ, ಯಾವ್ ಯಾವ ದೇವರಿಗೆ ಕೈ ಮುಗಿದನೋ, ಕೊನೆಗೂ ಒಂದೆರಡು ಸಿನಿಮಾಗಳಲ್ಲಿ ಬಣ್ನ ಹಚ್ಚಿದ. ಆದ್ರೆ ಆ ಸಿನಿಮಾಗಳು ತೆರೆಗೆ ಬರಲೇ ಇಲ್ಲ.





ಇದರ ನಡುವಲ್ಲೇ ರಾಜಕೀಯದ ಕಡೆ ವಾಲಿದ. ಕಲಬುರಗಿ ಜಿಲ್ಲೆ, ಸೇಡಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ತೆಲ್ಕೂರ್ ಬೆನ್ನಿಗೆ ನಿಂತ. ಯಡ್ಯೂರಪ್ಪನವರನ್ನ ಅಪ್ಪಾಜಿ ಅಂತಲೇ ಕರೀತಿದ್ದ. ಮುಂದಿನ ಮುಖ್ಯಮಂತ್ರಿ ಅಪ್ಪಾಜಿ. ಸೇಡಂ ಕ್ಷೇತ್ರಕ್ಕೆ ರಾಜ್ ಕುಮಾರ್ ಪಾಟೀಲ್ ತೆಲ್ಕೂರ್ ಅಂತಲೇ ಫೇಸ್​​ಬುಕ್​ನಲ್ಲಿ ಅಪ್ಡೇಟ್ ಮಾಡ್ತಿದ್ದ. ಕಣ ಕಣದಲ್ಲೂ ಬಿಎಸ್​ವೈ ಮತ್ತು ರಾಜ್ ಕುಮಾರ್ ಪಾಟೀಲ್ ಈ ಎರಡೇ ಹೆಸರನ್ನು ತುಂಬಿಕೊಂಡಿದ್ದ. ಇದು ಇವನನ್ನ ಸೇಡಂ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷನನ್ನಾಗಿ ಮಾಡಿತ್ತು.





ಓಡಿದ್ರೂ ಕೆಲಸ ಹುಡುಕಿಕೊಳ್ಳಲಿಲ್ಲ. ಮಗ ಆಸರೆಯಾಗಬಹುದು ಅಂತಿದ್ದ ತಾಯಿ ಕನಸು ಈಡೇರಲೂ ಇಲ್ಲ. ಸಿನಿಮಾ ರಾಜಕೀಯ ಅಂತಲೇ ಬದುಕು ದೂಡ್ತಿದ್ದ. ಇದರ ನಡುವಲ್ಲೇ ಮದುವೆಯೂ ಆಯ್ತು. ಮಗನೂ ಹುಟ್ಟಿದ. ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುತ್ತಿದ್ದ ಈ ಜೀವ, ಹುಟ್ಟಿದ ಊರನ್ನು ಬಿಟ್ಟು ಹೊರ ಬಂದಿದ್ದ. ಆಡಿಕೊಳ್ಳುವವರ ನಡುವೆ ಎಷ್ಟು ದಿನ ಇರೋದು ಅಂತ ದೂರದೂರಲ್ಲಿ ಗೂಡು ಕಟ್ಟಿಕೊಂಡಿದ್ದ. ಈ ಜೀವಕ್ಕೆ ಬಿಜೆಪಿಯೇ ಜೀವ ಆಗಿತ್ತು. ಬಿಎಸ್​ ಯಡ್ಯೂರಪ್ಪನವರನ್ನೇ ಅಪ್ಪಾಜಿ ಅಂತಿದ್ದ. ಸೇಡಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜ್ ಕುಮಾರ್ ಪಾಟೀಲ್ ಹೃದಯ ಎಂಬಂತೆ ನೋಡ್ತಿದ್ದ. ಮನೆ, ಮಠ, ಕುಟುಂಬಕ್ಕಿಂತ ಬಿಜೆಪಿಯೇ ಜೀವ ಅಂತಿದ್ದ ಈ ಜೀವ, ಈಗ ಬದುಕಿಲ್ಲ.







ಕೆಲವು ದಿನಗಳ ಹಿಂದೆ ಮಗನ ಜವಳಿ ಕಾರ್ಯಕ್ರಮ (ಕೂದಲು ತೆಗೆಸುವ ಕಾರ್ಯಕ್ರಮ)ಕ್ಕೆ ಹೋಗುತ್ತಿರಬೇಕಾದ್ರೆ ಅಪಘಾತವಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ಎದ್ದು ಬಂದು ಎಲ್ಲರನ್ನೂ ಹೊರಗೆಳೆದು ಎಲ್ಲರನ್ನೂ ಆಪತ್ತಿನಿಂದ ಕಾಪಾಡಿದ್ದ. ತನ್ನ ದೇಹದಿಂದ ರಕ್ತ ಹರಿಯುತ್ತಿದ್ದರೂ ಲೆಕ್ಕಿಸದೇ ಎಲ್ಲರ ಜೀವ ಉಳಿಸಲು ಯತ್ನಿಸಿದ್ದ. ಆಸ್ಪತ್ರೆಗೆ ಸೇರಿಸಿದಾಗ ಆಪರೇಷನ್​ ಮಾಡಬೇಕು ಅಂದಾಗಲೂ ನನಗೆ ಅಂಥಾದ್ದೇನೂ ಆಗಿಲ್ಲ ಅಂತಲೇ ಇದ್ದ. ಅದೆಷ್ಟೋ ಸಮಯ ಕುಳಿತು ಎಲ್ಲರೊಂದಿಗೂ ಮಾತನಾಡಿದ್ದ. ಆದ್ರೆ ಆಪರೇಷನ್ ಆದ ನಂತರ ಸಾವು ಬದುಕಿನ ನಡುವೆ ಹೋರಾಟ ಆರಂಭವಾಯಿತು. ವಾರಗಟ್ಟಲೆ ಆಸ್ಪತ್ರೆಯ ಬೆಡ್ ಮೇಲೆ ವಿಧಿಯ ಜೊತೆಗೆ ಹೋರಾಡುತ್ತಲೇ ಇದ್ದ. ಆದ್ರೆ ವಿಧಿಯ ಮುಂದೆ ನರ ಮಾನವನ ಹೋರಾಟ ಎಂದೂ ಗೆದ್ದಿಲ್ಲ. ಈತನ ವಿಚಾರದಲ್ಲಿ ಆಗಿದ್ದೂ ಅದೇ. ಮೇ 1ನೇ ತಾರೀಕು ಮದುವೆಯಾದ ದಿನವೇ ಜೀವ ಬಿಟ್ಟಿದ್ದ.





ಜೀವ ಅಂತ ಕರೆಯೋದಕ್ಕೂ ಮೊದಲು, ಎಲ್ಲರೂ ಇವನನ್ನ ಕಾಳಪ್ಪ ಅಂತಲೇ ಕರೀತಿದ್ರು. ಕಾಳಪ್ಪ ಅನ್ನೋದು ಜೀವ ಮಡಿವಾಳನ ಮೊದಲ ಹೆಸರು. ಇವನು ಅದ್ಯಾಕೆ ತನ್ನ ಹೆಸರನ್ನ ಜೀವ ಎಂದು ಬದಲಿಸಿಕೊಂಡನೋ ಗೊತ್ತಿಲ್ಲ. ಹೆಸರಲ್ಲಿ ಜೀವ ಇಟ್ಕೊಂಡ. ಆದ್ರೆ ದೇಹದಲ್ಲೇ ಜೀವ ಉಳಿಯಲಿಲ್ಲ.



ಕುಟುಂಬಕ್ಕೆ ಜೀವ ಆಗಿದ್ದವನು ಈಗ ಬದುಕಿಲ್ಲ. ಅಪಘಾತದಿಂದ ಪತ್ನಿ ಸ್ಥಿತಿಯೂ ಗಂಭೀರವಾಗಿದೆ. ತಾಯಿಗೂ ಮಗನ ಅನುಪಸ್ಥಿತಿ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಇರೋದು ಪುಟ್ಟ ಮಗ. ಬದುಕು ಸಾಗಿಸೋದು ಹೇಗೆ ಈ ಕುಟುಂಬ?



ವಿಚಿತ್ರ ಎಂದರೆ, ಜೀವ ಸಾವನ್ನೇ ಬಹಳಷ್ಟು ಜನ ಎದುರು ನೋಡ್ತಿದ್ರೇನೋ ಅನ್ನಿಸ್ತಿದೆ. ಜೀವ ಸಾವಿನ ನಮತರ ಕೆಲವರು ಬಿಜೆಪಿಯನ್ನು ಬೈಯುವಂಥಾ ಪೋಸ್ಟ್​ಗಳನ್ನು ಫೇಸ್​ಬುಕ್​ನಲ್ಲಿ ಟ್ಯಾಗ್ ಮಾಡಿದ್ದಾರೆ. ಅವರಿಗೆ ಜೀವ ಇಲ್ಲ ಅನ್ನೋದು ಗೊತ್ತಿಲ್ಲೊವೋ, ಅಥವ ರಾಜಕೀಯ ಎದುರಾಳಿ ಅಂತ ಟ್ಯಾಗ್ ಮಾಡಿದ್ರೋ ಗೊತ್ತಿಲ್ಲ. ಆದರೆ ಸಾವಿನಲ್ಲೂ ವೈರತ್ವ ಮೆರೆಯುತ್ತಿದ್ದಾರೆ ಕೆಲವರು.



ಬಡತನದೊಂದಿಗೆ ಹೋರಾಡಿ ಡಿಗ್ರಿ ಓದಿದೆ. ಹಳ್ಳಿಯಲ್ಲಿ ಹುಟ್ಟಿ ಬೆಳದರೂ ಛಲ ಬಿಡದೇ ಸಿನಿಮಾ ರಂಗಕ್ಕೂ ಕಾಲಿಟ್ಟೆ. ಛಲವಿದ್ದರೆ ಏನು ಬೇಕಾದ್ರೂ ಸಾಧಿಸಬಹುದು ಅಂತ ತೋರಿಸಿಕೊಡಲು ರಾಜಕೀಯದಲ್ಲೂ ಕಾಲಿಟ್ಟೆ. ಬದುಕಿನುದ್ದಕ್ಕೂ ವಿಧಿಯ ಜೊತೆಗೆ ಹೋರಾಡುತ್ತಲೇ ಬೆಳೆದೆ. ಆದ್ರೆ ಅಂತಿಮವಾಗಿ ವಿಧಿಯೇ ಗೆದ್ದು ಬಿಟ್ಟಿದೆ. ಆ ವಿಧಿ ಈಗ ನಿನ್ನ ಸಾವನ್ನು ನೋಡಿ ನಗುತ್ತಿದೆ. ನಿನ್ನ ಕುಟುಂಬದ ಕಣ್ಣೀರನ್ನು ನೋಡಿ ಗಹಗಹಿಸುತ್ತಿದೆ.



ಬದುಕಿದ್ದಷ್ಟು ದಿನವೂ ಬಿಜೆಪಿ, ಬಿಜೆಪಿ ಅಂತಿದ್ದ. ಅಪ್ಪಾಜಿ ಅಂತ ಬಿಎಸ್​ಯಡ್ಯೂರಪ್ಪನವರನ್ನ ಕರೀತಿದ್ದ. ಅಪ್ಪಾಜಿನೇ ಮುಂದಿನ ಸಿಎಂ ಅಂತಿದ್ದ. ಈಗ ಅವನಿಲ್ಲ. ಅವನ ಕುಟುಂಬವನ್ನು ಅಪ್ಪಾಜಿ ನೋಡಿಕೊಳ್ತಾರಾ? ಬಿಜೆಪಿ ಗೆಲ್ಲಿಸಿ, ರಾಜ್ ಕುಮಾರ್ ಪಾಟೀಲ್ ಗೆ ಜೈ ಅಂತ ಸೇಡಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಅಂತ ಪ್ರತಿ ದಿನ ಪ್ರತಿ ಕ್ಷಣ ಹೇಳ್ತಾನೇ ಇದ್ದ. ಕಣ್ನೀರಲ್ಲಿ ಮುಳುಗಿದ ಕುಟುಂಬವನ್ನು ಯಾರು ಕಾಪಾಡೋರು?



ರಾಜಕೀಯ ಪಕ್ಷಕ್ಕಾಗಿ ಬದುಕನ್ನು ಮುಡಿಪಿಡುವ ಬದಲಿಗೆ, ಕುಟುಂಬಕ್ಕಾಗಿ ಬದುಕನ್ನು ಮೀಸಲಿಟ್ಟಿದ್ದರೆ, ರಾಜಕೀಯ ಪಕ್ಷಕ್ಕಾಗಿ ಹೋರಾಡುವ ಬದಲು ನಿನ್ನ ಕುಟುಂಬದ ಆಸರೆಗಾಗಿ ಹೋರಾಡಿದ್ದರೆ, ರಾಜಕೀಯ ನಾಯಕರನ್ನ ಜೀವ ಅಂದುಕೊಳ್ಳುವ ಬದಲು ನಿನ್ನ ಕುಟುಂಬವೇ ಜೀವ ಅಂದುಕೊಂಡಿದ್ದರೆ, ಬಹುಶಃ ನಿನ್ನ ಬದುಕಿನ ದಿಸೆಯೇ ಬದಲಾಗಿರುತ್ತಿತ್ತೇನೋ.. ರಾಜಕೀಯದ ಗೀಳು ಅಂಟಿಸಿಕೊಂಡೆ. ಡಿಗ್ರಿ ಓದಿದರೂ ಊರಲ್ಲೇ ಉಳಿದು ಬಿಟ್ಟೆ. ಬಹುಶಃ ಒಂದು ಕೆಲಸ ಅಂತ ಹುಡುಕಿಕೊಂಡು ನಿನ್ನದೇ ದಾರಿ ಕಂಡು ಕೊಂಡಿದ್ದರೆ ನಿನ್ನ ಬದುಕಿನ ಚಿತ್ರಣವೇ ಬದಲಾಗುತ್ತಿತ್ತು. ಆದರೆ ನೀನು ರಾಜಕೀಯವನ್ನೇ ಜೀವ ಎಂದುಕೊಂಡೆ. ಆದರೀಗ ನಿನ್ನ ಕುಟುಂಬಕ್ಕೆ ಆಸರೆ ಯಾರು? ಅವರ ಕಣ್ಣೀರನ್ನು ಒರೆಸುವವರು ಯಾರು? ನಿನ್ನ ತಾಯಿಯ ಆ ಆರ್ತನಾದವನ್ನು ಆಲಿಸುವವರು ಯಾರು? ನಿನ್ನ ಮಗನ ಅಳುವನ್ನು ನಿಲ್ಲಿಸುವವರು ಯಾರು? ನೀನೇ ಜೀವ ಅಂದುಕೊಂಡು ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡ್ತಿರೊ ಆ ನಿನ್ನ ಮಡದಿಯ ಅಳಲನ್ನು ಆಲಿಸುವವರು ಯಾರು?












Отправить комментарий

0 Комментарии