ಈವತ್ತು ನಾನು ನಿಮಗೊಂದು ಅಚ್ಚರಿಯ ತಾಣದ ಬಗ್ಗೆ ಹೇಳ್ತೀನಿ.. ನಂಬೋದು ಬಿಡೋದು ನಿಮ್ ಇಷ್ಟ..
ಆದ್ರೆ ನಂಬಿಕೆ ಬರಲಿಲ್ಲ ಅಂದ್ರೆ ಒಮ್ಮೆ ಈ ಸ್ಥಳಕ್ಕೆ ಭೇಟಿ ನೀಡಿ.. ಅಗ ನಿಮಗೇ
ಗೊತ್ತಾಗುತ್ತೆ..
ಅಷ್ಟಕ್ಕೂ ಏನದು ಅಚ್ಚರಿ ಅಂತೀರ..?? ಇಲ್ಲೊಂದು ಸ್ಥಳ ಇದೆ.. ಇಲ್ಲಿ ಎಂಥಾ ಬರಗಾಲ ಬಂದರೂ ನೀರು
ಮಾತ್ರ ಸದಾ ತುಂಬಿ ಹರೀತಿರುತ್ತೆ.. ಹಾಗಂದ ಮಾತ್ರಕ್ಕೆ ಇಲ್ಲಿ ಯಾವುದೋ ನದಿ ಅಥವ ಸರೋವರ ಇರ್ಬೇಕು
ಅಂತ ಅನ್ಕೋಂಡ್ರೆ ನಿಮ್ಮ ಊಹೆ ತಪ್ಪಾಗುತ್ತೆ.. ಇಲ್ಲಿರೋದು ಕೇವಲ 4 ಅಡಿಗಳಷ್ಟು ಆಳವಿರುವ ಒಂದು ನೀರಿನ ಗುಂಡ (ಅಂದ್ರೆ ನೀರಿನ ಸ್ವಾಭಾವಿಕ ತೊಟ್ಟಿ).. ಕೆರೆ
ನದಿಗಳು ಬತ್ತಿದರೂ ಈ ನಾಲ್ಕು ಅಡಿಗಳ ಗುಂಡದಲ್ಲಿ ಸದಾ ನೀರು ತುಂಬಿರುತ್ತೆ ಅಂದ್ರೆ ನೀವು
ನಂಬ್ತೀರಾ..?? ಇದನ್ನು ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು.. ಅನುಮಾನವೂ ಮೂಡಬಹುದು.. ಆದ್ರೆ
ಇದು ಸತ್ಯ ಅಂದ್ರೆ ನಿಮಗೆ ನಂಬೋಕೆ ಆಗದೇನೂ ಇರಬಹುದು..
ಆದ್ರೂ ನಂಬಲೇ ಬೇಕಾದ ಒಂದು ಸತ್ಯ ಈ ಸ್ಥಳದಲ್ಲಿ ಅಡಗಿದೆ.. ಅಷ್ಟಕ್ಕೂ ಈ ಸ್ಥಳ
ಇರೋದಾದ್ರೂ ಎಲ್ಲಿ ಅಂತ ಗೊತ್ತಾ..??
ಇದು ಇರೋದು ಸಂಕನೂರಿಗೆ ಸಮೀಪವಿರುವ ದಟ್ಟ ಅಡವಿಯಲ್ಲಿ.. ಬಿಸಿಲ ನಾಡು.. ದೊರೆಗಳು ನಾಡು ಅಂತೆಲ್ಲಾ ಕರೆಯುವ ಗುಲ್ಬರ್ಗ
ಜಿಲ್ಲೆಯಲ್ಲಿ ಸಂಕನೂರು ಅನ್ನೋ ಒಂದು ಗ್ರಾಮವಿದೆ.. ಅಭಿವೃದ್ದಿ ಕಾಣದ, ಸರ್ಕಾರೀ ಯೋಜನೆಗಳಿಂದ
ವಂಚಿತಗೊಂಡ ಅಥವ ನಿರ್ಲಕ್ಷಕ್ಕೆ ಒಳಗಾದ ಗ್ರಾಮ ಅಂದ್ರೆ ತಪ್ಪಿಲ್ಲ.. ಸರ್ಕಾರೀ ಯೋಜನೆಗಳೆಲ್ಲವೂ ಕಾಗದಲ್ಲಿ
ಇವೆಯೇ ಹೊರತು ಜಾರಿಗೆ ಮಾತ್ರ ಬಂದೇ ಇಲ್ಲ.. ಆದ್ರೆ ಸರ್ಕಾರೀ ಕಡತಗಳಲ್ಲಿ ಮಾತ್ರ ಸಂಕನೂರು ಗ್ರಾಮದಲ್ಲಿ
ಅಭಿವೃದ್ದಿ ಯೋಜನೆಗಳು ಆಗ್ತಿವೆ.. ಇಂಥಾ ಬಡ ಗ್ರಾಮವಾದ ಸಂಕನೂರು ಸುತ್ತಮುತ್ತಲು ಕಾಡು,
ಬೆಟ್ಟಗಳಿಂದ ಆವೃತವಾಗಿದೆ.. ಈ ಪ್ರದೇಶದಲ್ಲಿ ಸೀತಾಫಲ ಹೆಚ್ಚಾಗಿ ಸಿಗುತ್ತವೆ. ಇದಕ್ಕೆ ಒಂದು
ಇತಿಹಾಸವೂ ಇದೆ.. ಇಂಥಾ ಐತಿಹಾಸಿಕ ಹಿನ್ನೆಲೆಯುಳ್ಳ ಈ ಸಂಕನೂರು ಗ್ರಾಮದಿಂದ ಯರಗೋಳಕ್ಕೆ ಹೋಗುವ ಬೆಟ್ಟದ ಕಾಲುದಾರಿಯಲ್ಲಿ ಒಂದು
ರಾಮಲಿಂಗ ದೇವಸ್ಥಾನ ಇದೆ.. ಈ ದೇವಸ್ಥಾನದ ಮುಂದೆಯೇ ನೀರು ಬತ್ತದ ಮತ್ತು ನಿರಂತರವಾಗಿ ಹರಿಯುವ
ಸಂಜೀವಿನಿಯಂತಿರೋ ಅಚ್ಚರಿಯ ಗುಂಡಿಯೊಂದು ಇದೆ..
ಇಲ್ಲಿನ ಅಚ್ಚರಿಗೆ ಕಾರಣ ಹುಡುಕುತ್ತಾ ಹೊರಟಾಗ ತ್ರೇತಾಯುಗದ ಕಥೆಯ ಎಳೆಯೊಂದು ಈ ಅಚ್ಚರಿಗೆ
ಕಾರಣ ಎಂದು ನಮಗೆ ತಿಳಿದು ಬಂತು. ಹೌದು.. ತಂದೆಯ ವಚನ ಪಾಲಿಸಲೆಂದು ಶ್ರೀರಾಮಚಂದ್ರನು ಸೀತಾದೇವಿ
ಮತ್ತು ಲಕ್ಷ್ಮಣರ ಸಮೇತ ಕಾಡಿಗೆ ಬರ್ತಾನೆ.. ವನವಾಸದ ಸಮಯದಲ್ಲಿ ಕಾಡಿನಲ್ಲಿ
ಅಲೆದಾಡುತ್ತಿರುವಾಗ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ
ತಾಲ್ಲೂಕಿನ ದಂಡಗುಂಡು ಅನ್ನೋ ಊರಿನ ಸಮೀಪ ಇರುವ ಸಂಕನೂರು ಎಂಬ ಗ್ರಾಮದ ಬಳಿಗೆ ಬರ್ತಾರೆ..
ಅಲ್ಲಿನ ದಟ್ಟ ಅಡವಿಯಲ್ಲಿ ಅಲೆದಾಡುತ್ತಿರುವಾಗ ಎಲ್ಲರಿಗೂ ದಣಿವಾಗುತ್ತದೆ.. ಹೇಳಿ ಕೇಳಿ
ಗುಲ್ಬರ್ಗ ಬಿಸಿಲಿನ ನಾಡು.. ಹೀಗಾಗಿ ದಾಹ ಹೆಚ್ಚಾಗುತ್ತದೆ.. ಬಳಲಿದ ಸೀತಾದೇವಿಯು ನೀರಿಗಾಗಿ
ಹಪಹಪಿಸುತ್ತಾಳೆ.. ಆದರೆ ಎಲ್ಲಿ ಹುಡುಕಿದ್ರೂ ನೀರು ಸಿಗೋದಿಲ್ಲ.. ಸೀತಾದೇವಿಯ ಮರುಕವನ್ನು
ನೋಡಲಾಗದ ಶ್ರೀರಾಮಚಂದ್ರನು ತನ್ನ ಬಾಣದಿಂದ ನೆಲಕ್ಕೆ ಗುರಿ ಇಟ್ಟು ಹೊಡೀತಾನೆ.. ಆಗ ಆ ಬಾಣ
ನೀರಿನ ತಾಣ ಇರುವ ಜಾಗಕ್ಕೆ ಹೋಗಿ ಸಂಧಿಸುತ್ತದೆ.. ನೀರಿನ ಸೆಲೆಗೆ ಹೋಗಿ ಸಂಪರ್ಕ ಕಲ್ಪಿಸುತ್ತದೆ..
ಆ
ಅಜ್ಞಾತ ಸ್ಥಳದಿಂದ ನೀರು ರಾಮನು ಇರುವ ಸ್ಥಳಕ್ಕೆ ಹರಿದು ಬರುತ್ತದೆ.. ಸೀತಾದೇವಿ ನೀರು
ಕುಡಿದು ದಣಿವಾರಿಸಿಕೊಳ್ತಾಳೆ.. ತನ್ನಲ್ಲಿದ್ದ ಹಣ್ಣನ್ನು ತಿಂದು ಹೊಟ್ಟೆ
ತುಂಬಿಸಿಕೊಳ್ಳುತ್ತಾಳೆ.. ಸಂತುಷ್ಟಳಾದ ಸೀತಾದೇವಿಯು "ಹಸಿದು ಈ ಸ್ಥಳಕ್ಕೆ ಬರುವವರಿಗೆ ಹೊಟ್ಟೆ ತುಂಬುವಂತಾಗಬೇಕು" ಎಂದು ತಾನು ತಿಂದಿದ್ದ ಹಣ್ಣಿನ ಬೀಜವನ್ನು ಆ ಕಾಡಿನಲ್ಲಿ ಎಸೆದು "ಹಸಿದು ಬಂದವರ ಹಸಿವು ನೀಗುವಂತಾಗಲಿ.. ಈ ಜಾಗದಲ್ಲಿ ಹಣ್ಣುಗಳು ತುಂಬಿ ತುಳುಕಲಿ" ಎಂದು ಹಾರೈಸಿದಳಂತೆ.. ಹೀಗಾಗಿ ಸೀತಾದೇವಿ ಹಾಕಿದ ಹಣ್ಣಿನ ಬೀಜಗಳ ಫಲದಿಂದ ಸಂಕನೂರು ಹಾಗೂ ಸುತ್ತಮುತ್ತರಲಿನ ಸ್ಥಳಗಳಲ್ಲಿ ಸೀತಾಫಲವನ್ನು ಹೆಚ್ಚಾಗಿ ಕಾಣುತ್ತವೆ..
ಈ ತಾಣದಲ್ಲಿ ದೇವಸ್ಥಾನವೊಂದನ್ನು ನಿರ್ಮಿಸಲಾಗಿದೆ.. ಈ ದೇವಸ್ಥಾನದ ಎದುರಿಗೇ ನಿರಂತರವಾಗಿ ಹರೀತಿರೋ ಪುಟ್ಟ ಗುಂಡವಿದೆ.. ದಣಿದು ಬರುವವರ
ದಣಿವಾರಿಸುತಿದೆ.. ಬರಗಾಲ ಬಂದಾಗ ಎಷ್ಟೋ ಸಲ ಸುತ್ತ ಮುತ್ತಲಿನ ಹಳ್ಳಿಗಳಿಗೆ ಈ ನಾಲ್ಕು ಅಡಿಗಳ
ನೀರಿನ ಗುಂಡ ಆಸರೆಯಾಗಿದೆ.. ಸುತ್ತೂರಿನ ಜನರು ಈ ನೀರನ್ನು ಬಳಸಿದರೂ ಹರಿಯುವುದು ಮಾತ್ರ ನಿಂತೇ
ಇಲ್ಲ ಅಂದ್ರೆ ಇದಕ್ಕಿಂತ ಅಚ್ಚರಿ ಬೇಕಾ..??
ಸವಿ ನೆನಪಿನ
ಶೇಖ್(ಸ್ಪಿಯ)ರ್
0 Комментарии